ಚಿಕ್ಕಬಳ್ಳಾಪುರ: ನಿಜಶರಣ ಮಹಾಮಹಿಮ ಮಡಿವಾಳ ಮಾಚಯ್ಯ ಅವರು ಸರಳವಾಗಿ ಆಡುಭಾಷೆಯಲ್ಲಿ ವಚನಗಳನ್ನು ರಚಿಸುವ ಮೂಲಕ ಸಮಾಜಿಕ ಸುಧಾರಣೆ ಮಾಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್ ಅವರು ತಿಳಿಸಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಮಡಿವಾಳ ಮಾಚಯ್ಯ ಜಯಂತಿಯ ಅಂಗವಾಗಿ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಿ ಮಾತನಾಡಿದರು. ಮಡಿವಾಳ ಮಾಚಯ್ಯ ನವರು ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಅವರು ಸಾಮಾಜಿಕ ಅನಿಷ್ಟ ಪದ್ಧತಿಗಳಾದ ಜಾತಿ ಪದ್ಧತಿ, ಅಸ್ಪಶ್ಯತೆಯ ವಿರುದ್ದ ಹೋರಾಡಿದ ಮಹಾಮಹಿಮರಾಗಿದ್ದು ತ್ರಿಕರಣ ಶುದ್ದಿಯನ್ನು ಪಾಲಿಸುವ ಮೂಲಕ ಆತ್ಮ ಶುದ್ದಿಯನ್ನು ಮಾಡಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ ಎಂದರು.
ವೇದಾಂತ ,ಉಪನಿಷತ್ತುಗಳನ್ನು ಆಡುನುಡಿಯಲ್ಲಿ ಜನರಿಗೆ ಪಸರಿಸಿದವರು.ಆತ್ಮಸಾಕ್ಷಾತ್ಕಾರವೇ ದೇವರು ಎಂದು ತಿಳಿಸಿ ಸಾಮಾಜಿಕ ಚಳುವಳಿಗಳ ಮೂಲಕ ಜನರಲ್ಲಿ ಅರಿವು ಮೂಡಿಸಿದ್ದಾರೆ. ಸಮಾಜದ ಏಳಿಗೆಗಾಗಿ ಶ್ರಮಿಸಿದ ಇಂತಹ ವಚನಕಾರರನ್ನು ನೆನೆಯಬೇಕು ಎಂದು ತಿಳಿಸಿದರು.
ಮಡಿವಾಳ ಮಾಚಯ್ಯ ಅವರ ಅನುಭೂತಿ, ಕಾಯಕನಿಷ್ಠೆ, ಕಾರ್ಯದ ಮೇಲೆ ಇರುವ ಶ್ರದ್ಧೆ ಬಿಂಬಿಸುವಂತಹ ವಚನಗಳನ್ನು ರಚಿಸಿದ್ದಾರೆ. ಅವರು ವಚನ ಸಾಹಿತ್ಯಕ್ಕೆ ಕೊಟ್ಟಂತಹ ಸಂದೇಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಅವರ ನಡೆನುಡಿಗಳು ದಾರಿದೀಪವಾಗಬೇಕು ಎಂದರು.
ಮಡಿವಾಳ ಮಾಚಯ್ಯ ಸಂಘದಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರಭಾಕರ್ ಅವರು ಮಹಾಮಹಿಮ ಮಡಿವಾಳ ಮಾಚಯ್ಯ ನವರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಡಿವಾಳ ಮಾಚಯ್ಯ ಸಂಘದ ಜಿಲ್ಲಾಧ್ಯಕ್ಷೆ ಪದ್ಮಾವತಿ, ಸಮುದಾಯದ ಪದಾಧಿಕಾರಿಗಳಾದ ಆರ್. ರಾಜಶೇಖರ್, ತಾಲ್ಲೂಕಿನ ಅಧ್ಯಕ್ಷರಾದ ಮುನಿನಾರಾಯಣಪ್ಪ, ಸಮುದಾಯದ ಪಧಾದಿಕಾರಿಗಳು ಮತ್ತು ಮುಖಂಡರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.