ಬೆಂಗಳೂರು ಗ್ರಾಮಾಂತರ ಜಿಲ್ಲೆ : ಸೇರಿದಂತೆ ಇತರೆ ಕಡೆಗಳಲ್ಲಿ ಸಾಕಷ್ಟು ಗಣಿಗಾರಿಕೆಗಳು ನಿಯಮ ಬಾಹಿರವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಕೃಷಿ ಚಟುವಟಿಕೆಗಳ ಮೇಲೆ ನಿರಂತರವಾಗಿ ವ್ಯತಿರಿಕ್ತ ಪರಿಣಾಮ ಬಿರುತ್ತಿರುವುದರ ಕುರಿತು ವಿಧಾನ ಪರಿಷತ್ನಲ್ಲಿ ಎಸ್.ರವಿರವರು ಪ್ರಶ್ನೆ ಧ್ವನಿಸಿದ್ದು, ತಾಲ್ಲೂಕಿನ ಕೃಷಿಕರು ಗಣಿ ನಿಷೇಧಕ್ಕೆ ಆಗ್ರಹಿಸುತ್ತಿದ್ದಾರೆ.
ಈ ಭಾಗದಲ್ಲಿ ತರಕಾರಿ, ಹೂವು, ದ್ರಾಕ್ಷಿ, ಸೀಬೆಹಣ್ಣು, ಮಾವು, ರೇಷ್ಮೆ ಹೇರಳವಾಗಿ ಬೆಳೆಯಲಾಗುತ್ತಿದ್ದು, ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ ಅಪಾರ ಪ್ರಮಾಣದಲ್ಲಿ ಮೊಲಗಳು, ಮುಂಗುಸಿ, ವಿವಿಧ ಜಾತಿಯ ಹಾವು, ಚಿರತೆ, ಜಿಂಕೆ, ಕಾಡುಹಂದಿ ಸೇರಿದಂತೆ ವನ್ಯಜೀವನಗಳು ಇರುವಿಕೆಯ ಬಗ್ಗೆ ಪೋಟೊ ಸಮೇತದ ದಾಖಲೆಗಳು ಅಚ್ಚರಿಗೆ ಕಾರಣವಾಗಿದೆ.
ಈ ಜೈವಿಕ ವೈವಿಧ್ಯಮಯ ತಾಣವನ್ನು ಕೇವಲ ಇಲ್ಲಿ ಸಿಗುವ ಅನನ್ಯ ಪಂಚ ಗಿರಿ ಶ್ರೇಣಿಯ ಶಿಲಾ ಪದರದ ವಿಶಿಷ್ಟ ಕಲ್ಲಿಗಾಗಿ ಪ್ರಭಾವಿಗಳು, ದುಡ್ಡು ಬಾಕರು ಪರಿಸರ ಮಾತೆಯ ಕಗ್ಗೊಲೆ ಮಾಡಿ, ಅನ್ನದಾತರ ಬೆಳೆಗಳ ಮೇಲೆ ಧೂಳಿನ ಸಿಂಚನ ಮಾಡಿ ನಿತ್ಯ ಪ್ರಕೃತಿಯ ಅತ್ಯಾಚಾರ ಮಾಡುತ್ತಿದ್ದಾರೆ ಎಂದು ರೈತರು ಹಿಡಿ ಶಾಪ ಹಾಕುತ್ತಿದ್ದಾರೆ.
ಸರ್ಕಾರಿ ಸಂಸ್ಥೆಗಳ ತಜ್ಞರ ತಂಡವೂ ಸಂಶೋಧನೆಗೆ ಆಗಮಿಸುವ ವೇಳೆಗೆ ಮಾಹಿತಿ ಸೋರಿಕೆಯಾಗಿ, ಕೆಲ ದಿನ ಗಣಿಗಾರಿಕೆಗೆ ವಿರಾಮವೂ ದೊರೆತ ಸಾಕಷ್ಟು ಪ್ರಸಂಗಗಳು ಇವೆ. ಅರ್ಕಾವತಿ ಹಾಗೂ ದಕ್ಷಿಣ ಪಿನಾಕಿನಿ ನದಿ ಪತ್ರಗಳಲ್ಲಿ ಇರುವ ಅಪಾರ ಖನಿಜ ಸಂಪತ್ತನ್ನು ಕಟ್ಟಡ ಕಲ್ಲು ಗಣಿ ಮಾಡುತ್ತೇವೆಂದು ಪರವಾನಗಿ ಪಡೆದ ಸಾಕಷ್ಟು ಕಂಪನಿಗಳು ಹೊರಕ್ಕೆ ಸಾಗಿಸುತ್ತಿರುವುದು ಎಂ ಸ್ಯಾಂಡ್ ಮತ್ತು ಅಪರೂಪದ ಅಲಂಕಾರಿಕ ಶಿಲೆ (ಗ್ರಾನೈಟ್) ಎಂಬುದು ಸ್ಥಳೀಯರ ಆರೋಪವಾಗಿದೆ.
ರೈತರಿಗೆ ಕೃಷಿಯ ನಷ್ಟಕ್ಕೆ ಕಾರಣ ಅವೈಜ್ಞಾನಿಕ ಬೇಸಾಯ ಪದ್ಧತಿ ಎಂದು ಸಬೂಬು ಹೇಳುವ ಅಧಿಕಾರಿಗಳು, ವೈಜ್ಞಾನಿಕ ವರದಿ ನೋಡಿ ಪರಿಹಾರದ ನಾಟವಾಗುತ್ತಿದ್ದಾರೆ. ಇಲ್ಲಿನ ಭೂಮಿಯಿಂದ ವಿದೇಶಕ್ಕೆ ಗುಣಮಟ್ಟದ ತರಕಾರಿ, ರೇಷ್ಮೆ, ಹಣ್ಣು ರಫುö್ತ ಮಾಡಬೇಕಿದ್ದ ಸರ್ಕಾರ ಸಾಗಿಸುತ್ತಿರುವುದು ಅಲಂಕಾರಿಕ ಶಿಲೆಯನ್ನು ಗಣಿಯಿಂದ ಹೊರತೆಗೆದರೇ ಖನಿಜ ಸಂಪತ್ತು ಕ್ಷಿಣಿಸುತ್ತದೆ. ಆದರೆ ಕೃಷಿಯಿಂದ ಮಾತ್ರವೇ ಆಹಾರ ಭದ್ರತೆ ದೊರೆಯುತ್ತಿದೆ ಎಂಬುದು ಹೋರಾಟಗಾರರ ಅಭಿಪ್ರಾಯ.
ದೇವನಹಳ್ಳಿಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾದಾಗ ಅಪಾರ ಪ್ರಮಾಣದಲ್ಲಿ ಕೃಷಿ ಉತ್ಪನ್ನಗಳನ್ನು ವಿದೇಶಕ್ಕೆ, ಹೊರ ರಾಜ್ಯಗಳಿಗೆ ರಫುö್ತ ಮಾಡಿ, ಕೃಷಿಯನ್ನೇ ಆರ್ಥಿಕ ಸಂಪನ್ಮೂಲವನ್ನಾಗಿ ಮಾರ್ಪಾಡು ಮಾಡಬೇಕೆಂದು, ಸಾಕಷ್ಟು ಸಂಘ ಸಂಸ್ಥೆಗಳು, ಯುವ ಉತ್ಸಾಹಿ ರೈತರು ಕನಸ್ಸು ಕಂಡಿದ್ದರು, ಆದರೆ ಗಣಿಯ ಸ್ಟೋಟಕಗಳ ಸದ್ದಿನಲ್ಲಿ ಆ ಕನಸ್ಸು ನುಚ್ಚು ನೂರಾಗಿ ಹೋಗಿದೆ.
ವರದಿಗಳಲ್ಲಿ ಗಣಿ ನಿಯಮಗಳ ಬಗ್ಗೆ ತಕರಾರು ಬರದಂತೆ ವ್ಯವಸ್ಥೆ ಮಾಡುವಷ್ಟು ಚಾಣಾಕ್ಷತನ ಅವರಿಗಿದೆ. ಅದೆಷ್ಟೇ ಸುಳ್ಳು ಮಾಹಿತಿ ನೀಡಿದರೂ ಇಲ್ಲಿರುವ ಪ್ರಾಕೃತಿಕ ಜೀವ ಸಂಕುಲ ಮಾತ್ರ ತನ್ನ ಅವಸಾನದ ಅಂಚಿನ ಅರ್ತನಾದವನ್ನು ಮಾತ್ರ ನಿತ್ಯ ಹೇಳುತ್ತಿದೆ. ಪರಿಷತ್ ಸದಸ್ಯರು ಸೇರಿದಂತೆ ಸಾಕಷ್ಟು ವರದಿಯಲ್ಲಿ ಗ್ರಾನೈಟ್ ಫ್ಯಾಕ್ಟರಿ ಒಟ್ಟು ಸಂಖ್ಯೆ 160 ಎಂದು ತಿಳಿಸಿದ್ದರೂ ಸರ್ಕಾರ ನೀಡಿರುವ ಮಾಹಿತಿಯಲ್ಲಿ ಕೇವಲ 93 ಗಣಿ, ಕ್ರಷರ್ಗಳು ಇವೆ ಎಂದು ಮಾಹಿತಿ ನೀಡಿ ಗ್ರಾನೈಟ್ ಫ್ಯಾಕ್ಟರಿಗಳನ್ನು ರಕ್ಷಿಸಲಾಗಿದೆ. ಈ ಕಾನೂನು ಬಾಹಿರ ಫ್ಯಾಕ್ಟರಿಗಳ ಪೋಷಕರು ಯಾರು ಎಂಬುದು ಜಿಲ್ಲಾಡಳಿತ ಉತ್ತರಿಸಬೇಕಿದೆ.
ಪಾಲನೆಯಾಗದ ನಿಯಮಗಳು: ಕೇಂದ್ರ ಸರ್ಕಾರದಿಂದ ನೀಡಲಾಗಿರುವ ನಿಯಮಗಳ ಪಾಲನೆಗೆ ಕಂಪನಿಗಳು ಹಿಂದೆಟ್ಟು ಹಾಕುತ್ತಿದ್ದು, ಈಗಾಗಲೇ ಸ್ಥಳೀಯ ನ್ಯಾಯಾಲಗಳು, ಲೋಕ ಅದಾಲತ್ನಲ್ಲಿ ನೀಡಲಾಗಿರುವ ನಿರ್ದೇಶನಗಳ ಕುರಿತು ಬಂಡೆ ಮಾರಾಟಗಾರರು ಗಮನ ಹರಿಸುತ್ತಿಲ್ಲ ಎಂಬುದು ನ್ಯಾಯವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಗಣಿಯಲ್ಲಿ ನೀರು ಬಳಸಿ ಧೂಳು ಹೊರಹೋಗದಂತಹ ತಂತ್ರಜ್ಞಾನ ಪಾಲನೆ ಮಾಡಬೇಕು, ರಾತ್ರಿ ವೇಳೆಯಲ್ಲಿ ಸ್ಪೋಟಕಗಳನ್ನು ಬಳಸಲು ಅವಕಾಶವಿಲ್ಲದಿದ್ದರೂ ಇದಕ್ಕೆಲ್ಲಾ ಕಿಮ್ಮತ್ತು ನೀಡಲು ಯಾರು ಸಿದ್ಧರಿಲ್ಲ ಎಂಬುದು ಸ್ಪಷ್ಟವಾಗಿದೆ. ತಡೆ ಗೋಡೆ, ಬಫರ್ ಜೋನ್ಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಉದ್ಯಮಿಗಳು ನಿರಂತರವಾಗಿ ಭೂತಾಯಿಯ ಗರ್ಭ ಬಗೆಯುವಲ್ಲಿ ನಿರತರಾಗಿದ್ದಾರೆ.
ಬಾಕ್ಸ್ 1
ಬಿಡಿಗಾಸು ರಾಯಧನಕ್ಕೆ ರೈತರ ಜೀವನ ಹಾಳು
ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಪರಿಷತ್ ಸದಸ್ಯ ಎಸ್.ರವಿ ರವರು ಈ ಕುರಿತು ಮಾಹಿತಿಯನ್ನು ಕೇಳಿದ್ದು ವಾರ್ಷಿಕವಾಗಿ 12.63 ಕೋಟಿ ರಾಯಧನ ಸರ್ಕಾರಕ್ಕೆ ಕಳೆದ ಪ್ರಸಕ್ತದಲ್ಲಿ ದೊರೆತಿದೆ ಎಂದು ತಿಳಿಸಲಾಗಿದೆ. ಆದರೆ ಇದರಲ್ಲಿ ಶೇ 30 ರಷ್ಟು ಸ್ಥಳೀಯ ಖನಿಜ ಸಂಪನ್ಮೂಲ ನಿಧಿಗೆ (ಡಿಎಂಎಫ್) ಗೆ ನೀಡಬೇಕು, ಆದರೆ ನೀಡಿರುವು ಮಾತ್ರ 23.98 ಲಕ್ಷ ಮಾತ್ರ ಸರ್ಕಾರಕ್ಕೆ ಸುಳ್ಳು ಲೆಕ್ಕ ನೀಡಿ ದಾರಿ ತಪ್ಪಿಸುವ ಕೆಲಸವಾಗುತ್ತಿದೆ. ಇಷ್ಟು ರಾಯಧನ ಪಡೆದು ಪುನಃ ರೈತರಿಗೆ ಪರಿಹಾರ ಧನ ನೀಡುವ ತಂತ್ರಗಾರಿಕೆಗೆ ಸರ್ಕಾರ ಬೆಂಬಲ ನೀಡುತ್ತಿರುವುದ ಬಗ್ಗೆ ಸಾಕಷ್ಟು ಅನುಮಾನಕ್ಕೆ ಕಾರಣವಾಗುತ್ತದೆ.
ಬಾಕ್ 2
ಸರ್ಕಾರಿ ಸಂಸ್ಥೆಯಲ್ಲಿ ವರದಿಯಲ್ಲಿ ದ್ವಂದ್ವ
ರೈತರು ಗಣಿ ಧೂಳಿನಿಂದ ಉಂಟಾಗುತ್ತಿರುವ ಸಮಸ್ಯೆಯ ಕುರಿತು ವೈಜ್ಞಾನಿಕ ವರದಿಯನ್ನು ಸಲ್ಲಿಸಿರುವ ರಾಜ್ಯ ರೇಷ್ಮೆ ಸಂಶೋಧನೆ ಅಭಿವೃದ್ಧಿ ಸಂಸ್ಥೆಯ ಮಾರ್ಚ್ 2022ರ ವರದಿಯಲ್ಲಿ ಧೂಳಿನಿಂದ ಹಿಪುö್ಪ ನೆರಳೆ ಬೆಳೆ ಹಾಳಾಗುತ್ತಿದೆ. ಇದರಿಂದ ರೇಷ್ಮೆ ಇಳುವರಿಯಲ್ಲಿಯೂ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ತಿಳಿಸಿದ್ದು, ಬಾಧಿತ 37 ರೈತರಿಗೆ 74.52 ಲಕ್ಷ ಪರಿಹಾರ ನೀಡಲು ಅಂದಾಜು ಮಾಡಲಾಗಿದೆ. ಆದರೆ, ಮಾಲಿನ್ಯ ನಿರಂತ್ರಣ ಮಂಡಳಿಯವರು ಮಾರ್ಚ್ 2022ರ ನೀಡುವ ವರದಿಯಲ್ಲಿ ಕಲ್ಲು ಗಣಿಗಾರಿಕೆಯಿಂದ ಉತ್ಪತ್ತಿಯಾಗುವ ಧೂಳಿನ ಪ್ರಮಾಣ ಸಮ್ಮತಿ ಪತ್ರದಲ್ಲಿ ನಿಗದಿಪಡಿಸಿರುವ ಪ್ರಮಾಣದ ಪರಿಮಿತಿಯಲ್ಲಿದೆ ಎನ್ನುತ್ತದೆ. ವರದಿಯ ದ್ವಂದ್ವಯುವ ಅಂಶಗಳು ಯಾರ ಶಿಫಾರಸ್ಸು, ಪ್ರಭಾವದಿಂದ ಬದಲಾಗಿದೆ ಎಂಬುದನ್ನು ಸಿದ್ಧಪಡಿಸಿದ ಕೈಗಳೇ ತಿಳಿಸಬೇಕಿದೆ.