ಪಾಲಾರ್ ಪತ್ರಿಕೆ | Palar Pathrike
ಬಾಗೇಪಲ್ಲಿ : ಜನರ ಸಹಕಾರ, ದೇವರ ಆಶೀರ್ವಾದದಿಂದ ಶಿವಲಿಂಗ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದು ಧಾತ್ರಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೆ.ವಿ. ಪ್ರಶಾಂತ್ ಕುಮಾರ್ ತಿಳಿಸಿದರು.ತಾಲ್ಲೂಕಿನ ಗೂಳೂರು ಹೋಬಳಿ, ಚಿನ್ನಕಾಯಲಪಲ್ಲಿ ಗ್ರಾಮದ ಬಳಿ ಇರುವ ಧಾತ್ರಿ ಗೋಶಾಲೆ ಬಳಿಯಿರುವ ಸಿದ್ದಲಿಂಗೇಶ್ವರ ಬೆಟ್ಟದಲ್ಲಿ ಧಾತ್ರಿ ಸೇವಾ ಟ್ರಸ್ಟ್ ವತಿಯಿಂದ ಬ್ರಹತ್ ಶಿವಲಿಂಗ ನಿರ್ಮಾಣಕ್ಕೆ ಗುದ್ದಲಿ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ತಾಯಿ ಹಾಲಿನ ನಂತರ ನಾವು ಕುಡಿಯುವುದು ಗೋವಿನ ಹಾಲು. ಗೋವುಗಳ ರಕ್ಷಣೆ ನಿಟ್ಟಿನಲ್ಲಿ ಗೋಶಾಲೆ ನಿರ್ಮಾಣ ಮಾಡಲಾಗಿದೆ. ಇದರ ಸಮೀಪದಲ್ಲೇ 23 ಅಡಿ ಎತ್ತರದ ಬೃಹತ್ ಶಿವಲಿಂಗ ನಿರ್ಮಾಣ ಮಾಡಬೇಕೆಂಬ ಬಯಕೆ ಇತ್ತು. ದೇವರ ಆಶೀರ್ವಾದ ಇಂದು ಶಿವಲಿಂಗ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಲಾಯಿತು. ಇಡೀ ಜಿಲ್ಲೆಯಲ್ಲಿಯೇ 2ನೇಯ ಅತಿದೊಡ್ಡ ವಿಗ್ರಹವಾಗಿದೆ. ಇಲ್ಲಿ ಗೋಶಾಲೆ ಜೊತೆಗೆ ಶಿವಲಿಂಗವೂ ಪ್ರತಿಷ್ಠಾಪಿಸುವುದರ ಮೂಲಕ ಜನರಲ್ಲಿ ಧಾರ್ಮಿಕ ಭಾವನೆಯ ಜೊತೆಗೆ ಗೋವುಗಳ ರಕ್ಷಣೆಗೆ ಅಗತ್ಯ ಪರಿಸರ ನಿರ್ಮಾಣ ಮಾಡಲಾಗುತ್ತದೆ ಎಂದರು.ಈ ಸಂದರ್ಭದಲ್ಲಿ ತಹಸೀಲ್ದಾರರಾದ ವೈ. ರವಿ. ಬೆಸ್ಕಾಂ ಇಲಾಖೆಯ ಸುಕುಮಾರ್, ಡಾ.ಅಶ್ವತ್ಥನಾರಾಯಣ ಸ್ವಾಮಿ ಸೇರಿದಂತೆ ಮತ್ತಿತರರು ಹಾಜರಿದ್ದರು.