ತುಮಕೂರು: ಖಾಸಗಿ ಸಂಸ್ಥೆಗಳು ತಮ್ಮ ವ್ಯವಹಾರಕ್ಕೆ ನೀಡುವ ಆದ್ಯತೆಯ ಜತೆಗೆ ಸಮಾಜಕ್ಕೂ ಸೇವೆ ನೀಡುವ ಮನೋಭಾವ ಬೆಳೆಸಿಕೊಂಡರೆ ಸ್ವಸ್ಥ ಹಾಗೂ ಪರಿಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.
ನಗರದ ಸಾಡೇ ಸ್ಮಾರಕ ಚರ್ಚ್ನಲ್ಲಿ ಸಿದ್ಧಗಂಗಾ ಆಸ್ಪತ್ರೆ ಹಾಗೂ ಸನ್ ಫ್ಯೂರ್ ರಿಫೈನ್ಡ್ ಆಯಿಲ್ ಸಹಯೋಗದಲ್ಲಿ ಏರ್ಪಡಿಸಿದ್ದ ಬೃಹತ್ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸನ್ ಫ್ಯೂರ್ ರಿಫೈಲ್ಡ್ ತೈಲ ಸಂಸ್ಥೆಯವರು ಸಾರ್ವಜನಿಕರ ಆರೋಗ್ಯದ ಬಗ್ಗೆ ವಹಿಸಿರುವ ಕಾಳಜಿ ಶ್ಲಾಘನೀಯ ಎಂದರು.
ತುಮಕೂರು ಏರಿಯಾ ಕೌನ್ಸಿಲ್ ನ ಛೇರ್ಮನ್ ಘನ.ಮನೋಜ್ ಕುಮಾರ್ ಮಾತನಾಡಿ, ಜಗತ್ತಿನಲ್ಲಿ ಮನುಷ್ಯ ಮನುಷ್ಯನ ಏಕತೆಯೊಂದೇ ಶಾಂತಿಯ ಮೂಲಬೇರು. ಪ್ರತಿಯೊಬ್ಬರೂ ತನ್ನ ಸುತ್ತಲಿನ ಜನರ ಮೇಲೆ ಪ್ರೀತಿ ವಾತ್ಸಲ್ಯ ಹೊಂದಿರಬೇಕು. ಆಗ ಮಾತ್ರ ಸಮಾಜದ ಸುಂದರವಾಗುತ್ತದೆ ಎಂದರು.
ಸಿದ್ಧಗಂಗಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಾಲಿನಿ ಎಂ. ಮಾತನಾಡಿ, ಸಿದ್ಧಗಂಗಾ ಆಸ್ಪತ್ರೆ ಕಳೆದ ನಾಲ್ಕು ವರ್ಷದಿಂದ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸುತ್ತಾ ಬಂದಿದ್ದು, ಸನ್ ಫ್ಯೂರ್ ರಿಫೈನ್ಡ್ ಆಯಿಲ್ ಸಂಸ್ಥೆಯ ಜತೆಗೆ ಆರೋಗ್ಯ ಶಿಬಿರ ಏರ್ಪಡಿಸಿರುವುದು ಸಂತಸ ತಂದಿದೆ ಎಂದರು.
ಎಂ. ಎಂ.ಕೆ. ಆಗ್ರೋಟೆಕ್ ಪ್ರೆöÊವೇಟ್ ಲಿಮಿಟೆಡ್ನ ನಿರ್ದೇಶಕ ಮನ್ನಾನ್ ಖಾನ್ ಮಾತನಾಡಿ, ಸಿದ್ಧಗಂಗಾ ಮಠದ ಹಿರಿಯ ಶ್ರೀಗಳಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ದಾಸೋಹದ ಮೂಲಕ ನಮಗೆಲ್ಲರಿಗೂ ಸಮಾಜ ಸೇವೆಗೆ ಮಾದರಿ ಮಾರ್ಗವನ್ನು ತೋರಿಸಿದ್ದಾರೆ. ಅವರ ಕಾಳಜಿಯೇ ನಮಗೆ ಇಂತಹ ಕಾರ್ಯಕ್ರಮಗಳಿಗೆ ಪ್ರೇರಣೆ ಎಂದರು.
ಶಿಬಿರದಲ್ಲಿ ಶಾಸಕ ಜ್ಯೋತಿಗಣೇಶ್ ಮಾತನಾಡಿದರು. ಬಂಡೆ ಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಸಿದ್ದಗಂಗಾ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್. ಪರಮೇಶ್, ಸಿಇಓ ಡಾ. ಸಂಜೀವ್ಕುಮಾರ್, ಮಹಾನಗರ ಪಾಲಿಕೆ ಸದಸ್ಯರಾದ ವಿಷ್ಣುವರ್ಧನ್ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಐನೂರಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ, ನೂರಕ್ಕೂ ಹೆಚ್ಚು ಜನರಿಗೆ ಉಚಿತ ಕನ್ನಡಕ ವಿತರಿಸಲಾಯಿತು.