ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಗ್ರಾಮ ದೊಡ್ಡಾಣೆಗೆ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ತಂಡ ಇಂದು ಭೇಟಿ ನೀಡಿ ಅನಾರೋಗ್ಯದಿಂದ ಬಳಲುತ್ತಿದ್ದ ಗ್ರಾಮಸ್ಥರಿಗೆ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ಔಷಧೋಪಚಾರ ಕೈಗೊಂಡಿದೆ.
ಸಮರ್ಪಕ ರಸ್ತೆ ಸೌಲಭ್ಯ ಇಲ್ಲದ ದೊಡ್ಡಾಣೆ ಗ್ರಾಮದಲ್ಲಿ 60 ರಿಂದ 70 ಜನರು ಜ್ವರ, ಶೀತ, ನೆಗಡಿ, ಕೆಮ್ಮು ಇನ್ನಿತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಆಸ್ಪತ್ರೆಗೆ ಧಾವಿಸಲು ತೊಂದರೆ ಉಂಟಾಗಿದೆ ಎಂಬ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಕುರಿತ ವರದಿಗೆ ಕೂಡಲೇ ಸ್ಪಂದಿಸಿರುವ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತುರ್ತಾಗಿ ಕ್ರಮ ವಹಿಸುವಂತೆ ನೀಡಿದ ಸೂಚನೆ ಮೇರೆಗೆ ತಕ್ಷಣವೇ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ತಂಡ ದೊಡ್ಡಾಣೆಗೆ ಭೇಟಿ ನೀಡಿ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿ ಪೂರಕ ಕ್ರಮಗಳನ್ನು ವಹಿಸಿದೆ.
ಮಾರ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ರಾಜೇಶ್, ಸಮುದಾಯ ಆರೋಗ್ಯ ಅಧಿಕಾರಿಗಳು, ಇನ್ನಿತರ ಆರೋಗ್ಯ ಸಿಬ್ಬಂದಿ ಅಗತ್ಯ ಔಷಧೋಪಚಾರ ಗಳೊಂದಿಗೆ ದೊಡ್ಡಾಣೆ ಗ್ರಾಮಕ್ಕೆ ಧಾವಿಸಿದರು. ಸ್ಥಳೀಯ ಶಾಲೆಯಲ್ಲಿ ಗ್ರಾಮಸ್ಥರ ಆರೋಗ್ಯವನ್ನು ಪರೀಕ್ಷಿಸಿದರು. ಮಕ್ಕಳ ಆರೋಗ್ಯ ತಪಾಸಣೆ ಸಹ ಕೈಗೊಂಡರು. ಅಗತ್ಯ ಔಷಧಿಗಳನ್ನು ಸಹ ವಿತರಿಸಿದರು.
ಗ್ರಾಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಗ್ರಾಮಸ್ಥರಿಗೆ ತಿಳಿವಳಿಕೆ ನೀಡಲಾಗಿದೆ.