ರಾಮನಗರ: ಕೆನರಾ ಬ್ಯಾಂಕ್ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಹಾರೋಹಳ್ಳಿ ಹಾಗೂ ಬೆಂಗಳೂರು ನಗರ ಮಹಿಳಾ ಅಭಿವೃದ್ದಿ ನಿಗಮ ಇವರ ಸಂಯುಕ್ತಾಶ್ರಯದಲ್ಲಿ ಚೇತನ ಯೋಜನೆಯಡಿ ಆಯೋಜಿಸಿದ್ದ ಉದ್ಯಮಶೀಲತಾಭಿವೃದ್ದಿ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಹಾಗೂ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕರಕುಶಲ ತರಬೇತಿ ಸಂಸ್ಥೆಯ ನಿರ್ದೇಶಕ ಪ್ರಕಾಶ್ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ದಮನಿತ ಮಹಿಳೆಯರಿಗಾಗಿ ಇರುವಂತಹ ಚೇತನ ಯೋಜನೆಯ ಮೂಲಕ ಸಿಗುವಂತಹ ಪ್ರೋತ್ಸಾಹ ಧನವನ್ನು ಬಳಸಿಕೊಂಡು ಸ್ವ ಉದ್ಯೋಗ ಮಾಡಬಹುದಾಗಿದೆ. ಸ್ವಾವಲಂಬಿಗಳಾಗಿ ಉತ್ತಮ ಜೀವನವನ್ನು ಕಟ್ಟಿಕೊಳ್ಳಬೇಕಾಗಿದೆ. ಸಮಾಜದ ಮುಖ್ಯ ವಾಹಿನಿಗೆ ಬಂದು ಉತ್ತಮ ಉದ್ಯಮದಾರರಾಗಬೇಕೆಂಬುದೆ ನಮ್ಮೆಲ್ಲರ ಆಶಯವಾಗಿದೆ. ಉದ್ಯಮದಾರರಾಗಲು ಸಂಸ್ಥೆಯ ಸಂಪೂರ್ಣ ಸಹಕಾರ ದೊರೆಯಲಿದೆ ಎಂದು ತಿಳಿಸಿದರು.
ಕನಕಪುರ ಕೆನರಾ ಬ್ಯಾಂಕಿನ ಅಧಿಕಾರಿ ಬೇಬಿ ರವರು ಮಾತನಾಡಿ ಮಹಿಳಾ ಅಭಿವೃದ್ದಿ ನಿಗಮದ ವತಿಯಿಂದ ವಿವಿಧ ಯೋಜನೆಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ಶ್ರಮಿಸುತ್ತಿರುವುದು ಶ್ಲಾಘನೀಯ. ದಮನಿತ ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಕಷ್ಟು ಯೋಜನೆಗಳಿದ್ದು, ಸಮುದಾಯದವರು ಜಂಟಿ ಭಾದ್ಯತಾ ಸಂಘಗಳನ್ನು ರಚಿಸಿಕೊಂಡು ಸಂಜೀವಿನಿ ಯೋಜನೆಯ ಮೂಲಕ ಆರ್ಥಿಕ ನೆರವನ್ನು ಪಡೆದು, ಸ್ವಂತ ಉದ್ಯಮ ಮಾಡಿ ಇತರೆ ನಾಲ್ಕು ಜನಕ್ಕೆ ಕೆಲಸ ಕೊಡುವ ಮಟ್ಟಿಗೆ ಬೆಳವಣಿಗೆ ಸಾಧಿಸಬಹುದಾಗಿದೆ ಎಂಬುದಾಗಿ ತಿಳಿಸಿದರು.
ಹೆಚ್.ಐ.ವಿ ಬಾದಿತ ಮಹಿಳೆಯರಿಗಾಗಿ ಇರುವಂತಹ ಧನಶ್ರೀ ಯೋಜನೆ,ದಮನಿತ ಮಹಿಳೆಯರಿಗಾಗಿ ಇರುವಂತಹ ಚೇತನ ಯೋಜನೆಗಳ ಮೂಲಕ ಸಿಗುವಂತಹ ಪ್ರೋತ್ಸಾಹ ಧನವನ್ನು ಸ್ವಂತ ಉದ್ಯೋಗ ಮಾಡಲು ಬಳಸಿಕೊಳ್ಳಬೇಕೆಂದು ತಿಳಿಸಿದರು.
ಬ್ಯಾಂಕ್ ಸಮಾಜಮುಖಿಯಾಗಿದ್ದು, ಉದ್ಯಮ ಕೈಗೊಳ್ಳಲು ಬೇಕಾಗುವಂತಹ ಬಂಡವಾಳವನ್ನು ಒದಗಿಸಿಕೊಡುವಂತಹ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ ಅದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಸಂಸ್ಥೆಯ ನಿರ್ದೇಶಕರಾದ ಸ್ವಾಮಿ. ಎಂ.ಎಸ್ ರವರು ಮಾತನಾಡಿ, ಚೇತನ ಯೋಜನೆಯ ಫಲಾನುಭವಿಗಳಿಗೆ ಉದ್ಯಮಿಗಳಾಗಲು ಸರ್ಕಾರದ ವತಿಯಿಂದ ಪ್ರೋತ್ಸಾಹ ಧನವನ್ನು ನೀಡುತ್ತಿದ್ದು ಇದರ ಸದುಪಯೋಗದೊಂದಿಗೆ ಜೀವನದಲ್ಲಿ ಮಾರ್ಪಡನ್ನು ಮಾಡಿಕೊಳ್ಳಬೇಕಿದೆ. ಬ್ಯಾಂಕುಗಳ ಮೂಲಕ ಇರುವಂತಹ ಸವಲತ್ತುಗಳ ಬಗ್ಗೆ ತರಬೇತಿಯಲ್ಲಿ ಸಂಪೂರ್ಣ ಮಾಹಿತಿ ನೀಡಿದ್ದು, ತರಬೇತಿಯಿಂದ ಕಲಿತಂತಹ ವಿಷಯಗಳನ್ನು ಸಂಪೂರ್ಣವಾಗಿ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬೇಕಿದೆ ಎಂದರು.
ತರಬೇತಿ ಪಡೆದ ಶಿಬಿರಾರ್ಥಿಗಳು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದರೊಂದಿಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಸಂಸ್ಥೆಯ ಉಪನ್ಯಾಸಕರಾದ ದೇವೀಂದ್ರಪ್ಪ ನೇತ್ರಾವತಿ, ಸಂಸ್ಥೆಯ ಸಿಬ್ಬಂದಿ ವರ್ಗದವರಾದ ಗವಿರಾಜ್, ರೂಪ, ಪ್ರತಾಪ್ ಕಾರ್ಯಕ್ರಮದಲ್ಲಿ ಹಾಜರಿದ್ದರು.