ರಾಮನಗರ: ಕನಕಪುರ ತಾಲ್ಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರ ಚಿಕ್ಕಮುದವಾಡಿ ವತಿಯಿಂದ ಆಯೋಜಿಸಲಾಗಿದ್ದ ಗೂಗಾರೆದೊಡ್ಡಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ತಪಾಸಣಾ ಶಿಬಿರಕ್ಕೆ ವೈದ್ಯಾಧಿಕಾರಿ ಡಾ. ಧರಣೇಶ್, ರವರು ಚಾಲನೆ ನೀಡಿದರು
ನಂತರ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಆಧುನಿಕ ಜೀವನ ಶೈಲಿ, ಮಾನಸಿಕ ಒತ್ತಡದಿಂದ ಮಧುಮೇಹ, ಮತ್ತು ರಕ್ತ ದೊತ್ತಡ ಇತ್ಯಾದಿ ಸಮಸ್ಯೆಗಳಿಂದ ಬಳಲುವ ಸಾಧ್ಯತೆಯಿದ್ದು ರಕ್ತ ದೊತ್ತಡ ಮತ್ತು ಮಧುಮೇಹ ರೋಗವನ್ನು ಪ್ರಾರಂಭಿಕ ಹಂತದಲ್ಲಿಯೇ ಪತ್ತೆಮಾಡಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಮುಂದಿನ ದಿನಗಳಲ್ಲಿ ರೋಗಿಗಳಿಗೆ ಉಂಟಾಗುವ ಇತರೇ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸುವ ಉದ್ದೇಶದಿಂದ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದ್ದು ಸಾರ್ವಜನಿಕರು ಇದರ ಪ್ರಯೋಜನೆ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗಂಗಾಧರ್ ಮಾತನಾಡುತ್ತಾ ಸಮುದಾಯದಲ್ಲಿ ಜನ ಸಾಮಾನ್ಯರು ತಂಬಾಕು ಉತ್ಪನ್ನಗಳ ಸೇವನೆ ಮಾಡುವುದು, ವೈಯಕ್ತಿಕ ಸ್ವಚ್ಛತೆ, ಪೌಷ್ಠಿಕ ಆಹಾರದ ಕೊರತೆ ಯಿಂದಾಗಿ ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳಿಂದ ಸಾವು ನೋವುಗಳು ಉಂಟಾಗುತ್ತಿದ್ದು ಜನ ಸಾಮಾನ್ಯರು ಸಾವು –ನೋವುಗಳಿಂದ ತಪ್ಪಿಸಬೇಕಾದರೆ ದುಶ್ಚಟಗಳಿಂದ ದೂರವಿರಬೇಕು, ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಜೊತೆಗೆ ಸ್ಥಳೀಯವಾಗಿ ದೊರೆಯುವ ಸೊಪ್ಪು-ತರಕಾರಿ, ಹಣ್ಣುಗಳು, ಸಿರಿ ಧಾನ್ಯ ಬಳಸಿ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವಂತೆ ಸಲಹೆ ನೀಡಿದರು.
ಜಿಲ್ಲಾ ಎಸ್.ಬಿ.ಸಿ.ಸಿ. ಸಂಯೋಜಕ ಸುರೇಶ್ ಬಾಬು ಮಾತನಾಡುತ್ತಾ, ೧೫ ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ೨ ಡೋಸ್ ಲಸಿಕೆ ಪಡೆಯುವಂತೆ ಸಲಹೆ ನೀಡಿದರು. ಕೋವಿಡ್ ಸೂಕ್ತ ಚಟುವಟಿಕೆ ಅನುಸಾರ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಕೈಗಳ ಸ್ವಚ್ಛತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಸಲಹೆ ನೀಡಿದರು.
ಈ ಶಿಬಿರದಲ್ಲಿ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ದೊಡ್ಡಸ್ವಾಮಿ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಸುಮಾ, ಆಶಾ ಕಾರ್ಯಕರ್ತೆಯರಾದ ಅಶ್ವಥಲಕ್ಷ್ಮಿ, ವಸಂತ,ವಿಜಯಲಕ್ಷ್ಮೀ, ಆಶಾ ಕಾರ್ಯಕರ್ತೆ ಸುಮಿತ್ರಾ ಹಾಗೂ ಸಾರ್ವಜನಿಕರು ಹಾಜರಿದ್ದರು.