ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ವಿ.ಚಂದ್ರಪ್ಪ ಸನ್ನದುದಾರರಿಗೆ ಲಂಚಕ್ಕಾಗಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಚಿಂತಾಮಣಿ ತಾಲೂಕು ಮದ್ಯಮಾರಾಟ ಸಂಘದ ಸದಸ್ಯರು ಜಿಲ್ಲಾಧಿಕಾರಿಗಳ ಭವನದ ಎದುರು ಪ್ರತಿಭಟನೆ ನಡೆಸಿದರು.
ಚಿಕ್ಕಬಳ್ಳಾಪುರ ನಗರ ಹೊರವಲಯ ಜಿಲ್ಲಾಡಳಿತ ಭವನದ ಎದುರು ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ಚಿಂತಾಮಣಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ವಿ.ಚಂದ್ರಪ್ಪ ಅಮಾನತಿಗೆ ಆಗ್ರಹಿಸಿ ನೂರರು ಬೆಂಬಲಿಗರಿAದ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷ ಗುರುಸ್ವಾಮಿ ರಾಜ್ಯದ ಅಬಕಾರಿ ಸನ್ನದುದಾರರು ಸಾಲದ ಸುಳಿಗೆ ಸಿಲುಕಿ ಒದ್ದಾಡುತ್ತಿದ್ದಾರೆ. ಪ್ರತಿ ವರ್ಷ ಲೈಸೆನ್ಸ್ ನವೀಕರಣ ಮಾಡಿಸಿಕೊಳ್ಳಲು ಕಣ್ಣಲ್ಲಿ ರಕ್ತ ಸುರಿಯುತ್ತದೆ. ನಮಗೆ ಬರುವ ಶೇ.10 ರಷ್ಟು ಲಾಭದಲ್ಲಿ ಕ್ಯಾಷಿಯರ್ ಸಂಬಳ, ಕೆಲಸಗಾರರ ಸಂಬಳ, ಮಳಿಗೆ ಬಾಡಿಗೆ ಇತ್ಯಾದಿಗಳನ್ನು ಭರಿಸಿ ಉಳಿಕೆ ಹಣದಲ್ಲಿ ಜೀವನ ಮಾಡುವುದಾದರೂ ಹೇಗೆ? 10 ವರ್ಷದಿಂದ ಈ ರಾಜ್ಯದ ಮುಖ್ಯಮಂತ್ರಿಗಳು, ಅಧಿಕಾರಿಗಳು, ಸನ್ನದುದಾರರ ಜಂಟಿ ಸಭೆ ನಡೆಸಲು ಅಸೋಸಿಯೇಷನ್ ವತಿಯಿದ ಮನವಿ ಮಾಡಿದರೂ ಈವರೆಗೆ ಈ ಕೆಲಸವಾಗಿಲ್ಲ. ನಮ್ಮನ್ನು ಎದುರಿಸಲಾಗದ ಇಲಾಖೆ ಅಧಿಕಾರಿಗಳು ರಾಜ್ಯಾದ್ಯಂತ ಲಂಚದ ರೂಪದಲ್ಲಿ ನಮಗೆ ಕಿರುಕುಳ ನೀಡುತ್ತಿದ್ದಾರೆ. ಲಂಚ ನೀಡಲಿಲ್ಲ ಎಂದರೆ ಸುಳ್ಳು ಕೇಸುಗಳನ್ನು ಹಾಕಿ ಮತ್ತಷ್ಟು ಹಿಂಸೆ ನೀಡುತ್ತಿದ್ದಾರೆ. ಚಿಂತಾಮಣಿಯಲ್ಲಿ ಅಬಕಾರಿ ಇಲಾಕೆಯ ಅಧಿಕಾರಿಗಳು ಮದ್ಯ ಮಾರಾಟಗಾರರಿಂದ ಪ್ರತಿ ತಿಂಗಳು 25 ಸಾವಿರ ಲಂಚ ಪಡೆಯುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ದೂರು ನೀಡಿದ್ದರೂ ಇಲಾಖೆ ಮತ್ತು ಸರಕಾರ ಏನೂ ಕ್ರಮ ತೆಗೆದುಕೊಂಡಿಲ್ಲ. ಚಿಂತಾಮಣಿ ವಲಯದಲ್ಲಿ ದುರ್ವರ್ತನೆ ತೋರಿ ಸನ್ನದುದಾರಿಗೆ ಕಿರುಕುಳ ನೀಡುತ್ತಿರುವ ಅಬಕಾರಿ ಉಪ ಅಧೀಕ್ಷಕ ವಿ.ಚಂದ್ರಪ್ಪ ಅವರನ್ನು ಕೂಡಲೇ ಸೇವೆಯಿಂದ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಸನ್ನದುದಾರರು ಇದೇ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರಮೇಶ್,ಅಶ್ವತ್ಬಾಬು, ಅರವಿಂದ್, ಶಂಕರ್ರೆಡ್ಡಿ, ಶಿವಾರೆಡ್ಡಿ, ನರಸಿಂಹರೆಡ್ಡಿ, ಕೃಷ್ಣ, ಅಶ್ವತ್ರೆಡ್ಡಿ, ನರೇಂದ್ರ, ಚೀಮಂಗಲ ಮಂಜುನಾಥ್ ಮತ್ತಿತರರು ಇದ್ದರು.