ಶಿಡ್ಲಘಟ್ಟ: ಸಾದಲಿ ಗ್ರಾಮದಲ್ಲಿ ನಡೆದ ಅಟಲ್ ಭೂಜಲ ಯೋಜನೆಯ ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ್ ಮಾತನಾಡಿದರು.
ಸಾದಲಿ ‘ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಚೆಕ್ ಡ್ಯಾಂ, ಹೊಲಗಳಲ್ಲಿ ಬದು ನಿರ್ಮಾಣ, ರಾಜಕಾಲುವೆ, ಕಲ್ಯಾಣಿಗಳ ಪುನಃಶ್ಚೇತನ, ಕೆರೆ, ಕುಂಟೆಗಳ ನಿರ್ಮಾಣ ಮುಂತಾದ ಯೋಜನೆಗಳನ್ನು ನಿರಂತರವಾಗಿ ಕೈಗೊಳ್ಳಬೇಕು’ ಎಂದು ಸಾದಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ್ ಹೇಳಿದರು.
ಶಿಡ್ಲಘಟ್ಟ ತಾಲ್ಲೂಕು ಸಾದಲಿ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಅಟಲ್ ಭೂಜಲ ಯೋಜನೆ ಅನುಷ್ಠಾನದ ಕುರಿತು ಗ್ರಾಮ ಪಂಚಾಯಿತಿ ಮಟ್ಟದ ಎರಡನೇ ಸಮುದಾಯ ಗ್ರಾಮಸಭೆಯಲ್ಲಿ ಮಾತನಾಡಿದರು.
ಕಳೆದ 20-30 ವರ್ಷಗಳಿಂದ ಜಿಲ್ಲೆಯಲ್ಲಿ ಸಮರ್ಪಕವಾದ ಮಳೆಯಾಗಿಲ್ಲ. ಅಂತರ್ಜಲ ಮಟ್ಟ ಕುಸಿದಿರುವುದರಿಂದ 1,800-2,000 ಆಡಿ ಆಳದ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಈ ವರ್ಷ ಉತ್ತಮವಾದ ಮಳೆಯಾಗಿದೆ ಎಂದು ನಿರ್ಲಕ್ಷ್ಯತೆ ತೋರಬಾರದು. ಅಂತರ್ಜಲದ ಮಟ್ಟವನ್ನು ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅಟಲ್ ಭೂಜಲ ಯೋಜನೆ ಮಹತ್ವದ್ದಾಗಿದೆ ಎಂದರು.
ಅಟಲ್ ಭೂಜಲ ಯೋಜನೆಯಿಂದ ಸಿಗುವ ಸೌಲಭ್ಯಗಳು ಸಂಸದರು ಹಾಗೂ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲೂ ಸಿಗುವುದಿಲ್ಲ. ಅವರು ಅಟಲ್ ಭೂಜಲ ಯೋಜನೆಯ ಸದುಪಯೋಗವನ್ನು ಪ್ರತಿಯೊಬ್ಬರು ತಪ್ಪದೇ ಪಡೆದುಕೊಳ್ಳಬೇಕು. ಸರ್ಕಾರಗಳು ಅತ್ಯುತ್ತಮ ಯೋಜನೆಗಳನ್ನು ರೂಪಿಸಿ ಜಾರಿಗೆ ತರುತ್ತವೆ. ಆದರೆ ಅನುಷ್ಠಾನ ಹಂತದಲ್ಲಿ ವಿಫಲವಾಗುತ್ತವೆ. ಯೋಜನೆಗಳ ಲಾಭ ಯಾರಿಗೆ ತಲುಪಬೇಕೋ ಅವರಿಗೆ ತಲುಪುವುದಿಲ್ಲ ಎಂದರು.
ಅAತರ್ಜಲ ಪರಿಣಿತ ಉಮೇಶ್, ಅಂತರ್ಜಲ ವೃದ್ಧಿ ಹಾಗೂ ಸದ್ಬಳಕೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಸಾದಲಿ ಗ್ರಾ.ಪಂ ಉಪಾಧ್ಯಕ್ಷ ಗೋಪಾಲರೆಡ್ಡಿ, ಪಿಡಿಒ ನಾರಾಯಣಮೂರ್ತಿ, ಕೆ ಗಂಗಾಧರ, ಶ್ರೀನಿವಾಸ್,ಸುರೇಶ್, ಕೃಷಿ ಅಧಿಕಾರಿ ಪ್ರೀತಿ, ನಾಗೇಂದ್ರ, ಮಂಜುನಾಥ್, ನರಸಮ್ಮ, ಕಾರ್ಯದರ್ಶಿ ವೆಂಕಟೇಶ್, ಕರವಸೂಲಿಗಾರ ಶ್ರೀನಿವಾಸ್ ಇದ್ದರು.