ಗುಡಿಬಂಡೆ: ಅಂಬಿಕಾತನಯದತ್ತ ಎಂಬ ಕಾವ್ಯನಾಮದೊಂದಿಗೆ ಪ್ರಸಿದ್ಧರಾದ ಮತ್ತು ಕರ್ನಾಟಕದಲ್ಲಿ ಸಾಹಿತ್ಯ ಅಭಿವೃದ್ಧಿಗೆ ಶ್ರಮಿಸಿದ ವಾತಾವರಣವನ್ನು ಹುಟ್ಟುಹಾಕಿ ಕನ್ನಡ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಮೇರುಕವಿ ದ.ರಾ.ಬೇಂದ್ರೆಯವರ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪಟ್ಟಣದ ಸರ್ಕಾರಿ ಬಾಲಕರ ಪ್ರೌಡಶಾಲೆಯಲ್ಲಿ ಆಯೋಜಿಸಲಾಗಿತ್ತು. ಕಸಾಪ ತಾಲ್ಲೂಕು ಅದ್ಯಕ್ಷರಾದ ಸುಬ್ಬರಾಯಪ್ಪ ಬೇಂದ್ರೆಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಬೇಂದ್ರೆಯವರ ಬದುಕುಬರಹವನ್ನು ಕುರಿತು ಮಾತನಾಡಿ “ದ.ರಾ.ಬೇಂದ್ರೆಯವರು ಕನ್ನಡ ಲೋಕ ಕಂಡ ಶ್ರೇಷ್ಠ ಕವಿ. ಸರಳ ಜನಪದ ವಚನಶೈಲಿಯ ಕಾವ್ಯ, ಸಾಹಿತ್ಯ ರಚನೆಗೆ ಮುನ್ನುಡಿ ಬರೆದವರು. ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಇವರು ನಮ್ಮ ನಾಡು ನುಡಿಯ ಸಂಸ್ಕ್ರತಿಯ ಬೆಳವಣಿಗೆಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ದ.ರಾ.ಬೇಂದ್ರೆಯವರು ಹೊಸಗನ್ನಡ ಭಾವಗೀತೆಯ ಮೂಲ ಪ್ರವರ್ತಕರಲ್ಲಿ ಒಬ್ಬರು. ಆದ್ದರಿಂದಲೇ ಇವರನ್ನು ಯುಗದ ಕವಿ, ಜಗದಕವಿ ಎಂದು ಕರೆಯಲಾಗಿದೆ. ಬದುಕಿದಷ್ಟು ಕಾಲ ತಮ್ಮನ್ನು ದೇಶ, ಭಾಷೆ, ಸಂಸ್ಕ್ರತಿಯ ಕುರಿತ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದರು. ಅವರ ‘ನಾಕುತಂತಿ’ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ ಎಂದು ತಿಳಿಸಿದರು.
ಈ ವೇಳೆ ಕರುನಾಡು ಸಾಹಿತ್ಯ ಪರಿಷತ್ ರಾಜ್ಯಾದ್ಯಕ್ಷ ಫಯಾಜ್ ಮಾತನಾಡಿ, ಗಡಿನಾಡಿನಲ್ಲಿ ಕನ್ನಡ ಬಾಷೆಯನ್ನು ಬೆಳೆಸುವಂತೆ ಮಕ್ಕಳಿಗೆ ಪ್ರೋತ್ಸಾಹಿಸಬೇಕು, ಬೇಂದ್ರೆಯವರ ಹಾಡುಗಳು ಸುಮಧುರವಾಗಿರುತ್ತವೆ. ಸಾಧಾರಣವಾದ ಪದರಚನೆಯ ಮೂಲಕ ಸುಲಭವಾಗಿ ಅರ್ಥೈಸಿಕೊಳ್ಳುವ ಭಾವನಾತ್ಮಕ ಕಾವ್ಯ ರಚನೆಗೆ ಬೇಂದ್ರೆಯವರು ಹೆಸರಾಗಿದ್ದಾರೆ. ಆಧ್ಯಾತ್ಮದಲ್ಲೂ ವಿಶೇಷ ಆಸಕ್ತಿ ಹೊಂದಿದ್ದ ಬೇಂದ್ರೆಯವರು ಕಾಳಿದಾಸನ ಸಂಸ್ಕ್ರತ, ‘ಮೇಘದೂತ’ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದರು. ಜೀವನ ಮೌಲ್ಯಗಳು ಹಾಗೂ ಸಾಮಾಜಿಕ ದೃಷ್ಟಿಕೋನ ಅವರ ಕೃತಿಗಳಲ್ಲಿ ವ್ಯಕ್ತವಾಗಿದೆ. ಗಣಿತ ಮತ್ತು ಸಂಖ್ಯಾಶಾಸ್ತ್ರದಲ್ಲೂ ಅಪಾರ ಜ್ಞಾನ ಹೊಂದಿದ್ದರು ಎಂದು ಹೇಳಿದರು.
ಪ್ರಬಂಧ ಸ್ಪರ್ದೆ:- ದ.ರಾ.ಬೇಂದ್ರೆ ಜಯಂತ್ಯೋತ್ಸವ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರೌಡಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ದೆ ಏರ್ಪಡಿಸಿ ವಿಜೇತರಾದ ರಚನ ಕೀರ್ತಿ, ನೂರ್ ಅಯಿನ್ ಮತ್ತು ಪ್ರಗತಿ ಎಂಬ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಅದ್ಯಕ್ಷರಾದ ನಾರಾಯಣಸ್ವಾಮಿ, ಜನಪದ ರಾಜಪ್ಪ, ಶ್ರೀರಾಮಪ್ಪ್.ವಿ, ಲಕ್ಷ್ಮೀಪತಿ, ಶ್ರೀನಿವಾಸ್ ಗಾಂಧಿ, ಮಂಜುಳ ಬಿ.ಆರ್,ಶಿಕ್ಷಕಿಯರಾದ ಮಂಜುಳ, ಸ್ವಪ್ನ, ಮಹಾಲಕ್ಷ್ಮಿ, ಮುನಿಕೃಷ್ಣ, ಭಾರತಿ ರೆಡ್ಡಿ, ಮುಖ್ಯೋಪಾದ್ಯಯರಾದ ನಂಜುಂಡಪ್ಪ, ಶಿಕ್ಷಣ ಸಂಯೋಜಕ ಚಂದ್ರಶೇಖರ್ ಹಾಗೂ ವಿದ್ಯಾರ್ಥಿಗಳು ಪಾಲ್ಗೋಂಡಿದ್ದರು.