ಚಿಕ್ಕಬಳ್ಳಾಪುರ: ಇತಿಹಾಸದಲ್ಲಿ ಕಾಣದ ಅನೇಕ ಸತ್ಯಗಳು ಪುರಾತತ್ವ ಶಾಸ್ತ್ರದ ಜ್ಞಾನದಿಂದಾಗಿ ಕಂಡು ಬರುತ್ತದೆ. ಇತಿಹಾಸದ ಪುನರ್ರಚನೆಗೆ ಪುರಾತತ್ವ ಶಾಸ್ತ್ರದ ಕೊಡುಗೆಗಳು ಹೇರಳವಾಗಿವೆ ಎಂದು ಮೈಸೂರು ವಿವಿಯ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಎಸ್. ರಂಗರಾಜು ಹೇಳಿದರು.ಚಿಕ್ಕಬಳ್ಳಾಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದಿಂದ ಐಕ್ಯೂಎಸಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಪುರಾತತ್ವ ಶಾಸ್ತ್ರ ಮತ್ತು ಅದರ ಪೂರಕ ವಿಷಯಗಳು’’ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ಬಹುಶಿಸ್ತೀಯ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಸಂಸ್ಕೃತಿಯ ಭಾಗವಾಗಿರುವ ಪರಂಪರೆ ಮತ್ತು ಪುರಾತತ್ವ ಎಂಬುದು ಸಂಸ್ಕೃತಿಯ ಮಹತ್ವವನ್ನು ಮೂಲ ಆಶಯಗಳನ್ನು ಒರೆಗೆ ಹಚ್ಚಿ ಬೆಳಕಿಗೆ ತರುವ ಕಾರ್ಯ ಮಾಡುವಂತಹದ್ದು ಎಂಬುದನ್ನು ಮರೆಯಬಾರದು. ಬ್ರಿಟಿಷ್ ಅಧಿಕಾರಿಯಾಗಿದ್ದ ಕರ್ನಾಟಕ ಶಾಸನಶಾಸ್ತ್ರ ಪಿತಾಮಹ ಎಂದು ಖ್ಯಾತವಾಗಿದ್ದ ಬಿ.ಎಲ್ ರೈಸ್ರವರು ೯೬೦೦ ಶಾಸನಗಳನ್ನು ಓದಿ ಭಾಷಾಂತರಗೊಳಿಸಿ ಪುಸ್ತಕರೂಪದಲ್ಲಿ ಪ್ರಕಟಿಸಿದ್ದರಿಂದ ಪುರಾತತ್ವ ಶಾಸ್ತ್ರದ ಮಹತ್ವ ಅರಿವಿಗೆ ಬಂತು. ಭಾರತದ ಶ್ರೇಷ್ಠ ದೊರೆ ಎಂದು ಹೆಸರು ಗಳಿಸಿದ್ದ ಅಶೋಕನಿಗೆ ದೇವನಾಂಪ್ರಿಯ ಎಂದು ಬಿರುದಿದ್ದುದು ಬಿ ಎಲ್ ರೈಸ್ ರವರ ಪುರಾತತ್ವ ಶಾಸ್ತ್ರದ ಮೇಲಿನ ಆಸಕ್ತಿಯಿಂದಾಗಿ ಮೊದಲಬಾರಿಗೆ ಬೆಳಕಿಗೆ ಬಂತು ಎಂಬುದು ಈ ಶಾಸ್ತ್ರದ ಮೌಲ್ಯವನ್ನು ಹೆಚ್ಚಿಸುತ್ತದೆ.ದೇವಾಲಯಗಳು ಪ್ರಾಚೀನ ಕಟ್ಟಡಗಳು ನಾಣ್ಯಗಳು, ಸ್ಮಾರಕಗಳು ಮತ್ತು ಜನವಸತಿಪ್ರದೇಶಗಳಾಗಿದ್ದ ಕುರುಹುಗಳು ತಾಳೆಗರಿ ಸೇರಿದಂತೆ ಇತಿಹಾಸದತ್ತ ಬೆಳಕು ಚೆಲ್ಲುವ ಎಲ್ಲ ದಾಖಲೆಗಳು ಪುರಾತತ್ವ ದಾಖಲೆಗಳೆಂದು ಕರೆಸಿಕೊಳ್ಳುತ್ತವೆ. ನಾಡಿನ ಜನಜೀವನದೊಳಗೆ ಕಳೆದುಹೋಗಿರುವ ಮಸುಕಾಗಿರುವ ಅದೆಷ್ಟೋ ಮಹತ್ವದ ಐತಿಹಾಸಿಕ ಸಂಗತಿಗಳು ಪುರಾತತ್ವ ಸಂಶೋಧನೆಯ ಫಲವಾಗಿ ಬೆಳಕಿಗೆ ಬಂದು ಐತಿಹಾಸಿಕ ಸಂಗತಿಗಳ ಮಹತ್ವವನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಪ್ರೊ.ಜಿ.ಡಿ.ಚಂದ್ರಯ್ಯ ಮಾತನಾಡಿ ನಮ್ಮ ಸಂಸ್ಕೃತಿ ಬದುಕನ್ನು ಹಿಂದಿರುಗಿ ನೋಡುವ, ಮರುಪರಿಶೀಲನೆಗೆ ಒಳಪಡಿಸುವ ಕ್ರಮವನ್ನು ಪುರಾತತ್ವ ಶಾಸ್ತ್ರ ಕಲಿಸಲಿದೆ. ಇದರಿಂದ ವರ್ತಮಾನದ ಬದುಕಿನಲ್ಲಿ ರೂಢಿಸಿಕೊಳ್ಳಬೇಕಾದ ಮೌಲ್ಯಗಳು ಮತ್ತು ಪದ್ದತಿಗಳನ್ನು ಪುರಾತತ್ವದ ಅಧ್ಯಯನದಿಂದ ಕಲಿಯಬಹುದಾಗಿದೆ ಎಂದರು. ಕಾರ್ಯಕ್ರಮದ ಗೋಷ್ಠಿಗಳಲ್ಲಿ ಹಲವು ಜಿಲ್ಲೆಗಳ ಕಾಲೇಜು ಮತ್ತು ವಿವಿಗಳಿಂದ ಆಗಮಿಸಿದ್ದ ಪ್ರಾಧ್ಯಾಪಕರು ವಿಷಯ ಮಂಡನೆ ಮಾಡಿದರು.ಬಿ.ಎಂ.ಶ್ರೀ ಪ್ರತಿಷ್ಠಾನದಿಂದ ಹಸ್ತಪ್ರತಿ ಮತ್ತು ತಾಳೆಗರಿಗಳಪ್ರದರ್ಶನ , ಮತ್ತು ನಿವೃತ್ತ ಎಂಜಿನಿಯರ್ ಎಚ್ ಕೆ ರಾಮರಾವ್ ರವರಿಂದ ಹಳೆಯ ಕರೆನ್ಸಿ, ನಾಣ್ಯಗಳ ಪ್ರದರ್ಶನ ಏರ್ಪಡಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಷಫಿ ಅಹಮದ್, ಮಹಿಳಾ ಕಾಲೇಜಿನ ಪ್ರಿನ್ಸಿಪಾಲ್ ಡಾ.ನರಸಿಂಹಮೂರ್ತಿ, ಐಕ್ಯೂಎಸಿ ಸಂಯೋಜಕರಾದ ಡಾ.ಸವಿತ, ಅತಿಥಿ ಉಪನ್ಯಾಸಕರಾದ ಡಾ.ರವೀಂದ್ರ , ಡಾ.ಡಿವಿ ಶ್ರೀನಿವಾಸ್ ಮುಂತಾದವರಿದ್ದರು.